ರಾಗ - ಭೈರವಿ ಧ್ರುವ ತಾಳ
ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು|
ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ|
ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ|
ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ|
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ|
ಪರಿಸಿದ್ಧ(ಪ್ರಸಿದ್ಧ)ನಾದನೆಂದು ಅರಿದು ಈ ಸ್ಥಳದಲ್ಲಿ|
ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ|
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು|
ಸಿರಿಕೃಷ್ಣನ್ನ ಚರಣಕ್ಕೇರಗಿ ಸಂತೋಷದಲ್ಲಿ |
ಧರೆಯಮ್ಯಾಲಿದ್ದ ಜನರ ಪೋರೆಯ ಬೇಕೆಂದೆನುತ|
ಹರಿ ನುಡಿದನು ಇವರ ಪರಮ ದಯಾಳು ತಾನು|
ಗುರ್ವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೇ|
ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು|
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ|
ಧರ ನಾರಾಯಣ ತಾನೆ ವರಸನ್ನಿಧಾನನಾಗಿ|
ಇವರಿಗೆ ಫಲತಂದೀವ ಇಹಪರದಲ್ಲಿನ್ನು
ಕರುಣಾಕರ ರಂಗ ಗೋಪಾಲ ವಿಠ್ಠಲ ತನ್ನ|
ಶರಣರ ಪೋರೆವಂಥ ಚರಿಯಾ ಪರಿಪರಿ ಉಂಟೊ|| ೧ ||
ಮಟ್ಟ ತಾಳ
ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರ್ತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ |
ತರುವಾಯದಲಿನ್ನು ತರತಮ್ಯಾನುಸಾರ |
ಪರಿ ಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿ ಪರಿ ಪುರಾಣ ಭಾರತ ಗಾನದಲಿ |
ಸರಿ ಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲ ವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ ||
ತ್ರಿವಿಡಿ ತಾಳ
ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ |
ಸಿರಿ ರಾಮನಾಗಿ ಇಲ್ಲಿ ಪರಿ ಪರಿ ಪರಿ ದೇಶಾಂ-|
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರ ಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ |
ಪರಿ ಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ , ಹರಿ ಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣ ಜನಕ ಇನ್ನು |
ವರ ಜ್ಞಾನ ಸುಧೆಯನ್ನು ಕರೆದು ಕೊಡುತಲಿಪ್ಪ |
ಸಿರಿ ವಂದಿತ ಪಾದ ಗೋಪಾಲ ವಿಠ್ಠಲ |
ಪರಿ ಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ ||
ಅಟ್ಟತಾಳ
ರಾಘವೇಂದ್ರನೆಂಬೋ ರೂಪ ತಾನೇ ಆಗಿ |
ರಾಘವೇಂದ್ರನೆಂಬೋ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲ ವಿಠ್ಠಲ |
ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ ||
ಆದಿ ತಾಳ
ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನೋತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರ ಭೋಜನ |
ಜನನಾಥ ತಾನಿಲ್ಲಿ ಅನುವಾಗಿ ತಾನಿಂದು |
ಘನ ಮಹಿಮೆಯಿಂದಲಿ |
ಜನರ ಪಾಲಿಸುವದಕ್ಕನುಮಾನ ಸಲ್ಲದೊ |
ಗುಣ ಗಣ ಪರಿಪೂರ್ಣ ಗೋಪಾಲ ವಿಠ್ಠಲ |
ಅನೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || ೫ ||
ಜತೆ
ಮಂತ್ರಸಿಧ್ಧಿ ಕ್ಷೇತ್ರ ಇದು ನೋಡಿ ಕೋವಿದರು |
ಮಂತ್ರ ಪ್ರತಿಪಾದ್ಯ ಗೋಪಾಲ ವಿಠ್ಠಲನಿಂದ || ೬ ||
|| ಶ್ರೀ ಮಧ್ವೇಶಾರ್ಪಣಮಸ್ತು ||
Comments
Translation in English Please...
Need a translation in English... can anybody help?
can you translate to English?
Namasthe,
Can you translate to English please?
Thanks
Sri Hari Sarvothama Vayu Jivothama!